Sunday, May 20, 2012

ರೇವಣಸಿದ್ಧ ಮತ್ತು ಸಿದ್ಧರಾಮರು ಕುರುಬರು

ರೇವಣಸಿದ್ಧ ಮತ್ತು ಸಿದ್ಧರಾಮರು ಕುರುಬ ಸಮುದಾಯಕ್ಕೆ ಸೇರಿದವರು ಎಂಬುದಕ್ಕೆ ಲಿಖಿತ ಆಕರಗಳಿಗಿಂತ ಮೌಖಿಕ ಆಕರಗಳಲ್ಲಿ ಹೆಚ್ಚಿನ ಆಧಾರಗಳು ಸಿಗುತ್ತವೆ. ಅವುಗಳನ್ನು ಈಗ ಅವಲೋಕಿಸಬಹುದು. ಕರ್ನಾಟಕದ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ರೇವಣಸಿದ್ಧೇಶ್ವರನದು ಪ್ರಸಿದ್ಧ ಹೆಸರು. ಕುರುಬರ ಗುರುಪರಂಪರೆ   ಯಲ್ಲಿಯಂತೂ ಈತನಿಗೆ ಮೊದಲ ಪ್ರಾಶಸ್ತ್ಯ. ಮೌಖಿಕ ರೂಪದ ತಗರ ಪವಾಡ ಗ್ರಂಥವು ಕುರುಬರ ಸಂಸ್ಕೃತಿಯನ್ನು ಅನಾವರಣಗೊಳಿಸುವ ಒಂದು ದೇಶಿ ಕಾವ್ಯ. ಈ ಕಾವ್ಯದ ಕಥಾನಾಯಕನಾದ ಶಾಂತಮುತ್ತಯ್ಯನು ರೇವಣಸಿದ್ಧ ಪರಂಪರೆಯನ್ನು ಮುಂದುವರೆಸಿದವನು.

ಬಿಜಾಪುರ ಜಲ್ಲೆಯ ಸರೂರು, ಮೈಸೂರು ಜಿಲ್ಲೆಯ ಕಳಲೆ, ಚಿತ್ರದುರ್ಗ ಜಿಲ್ಲೆಯ ಹುಲ್ಲೂರು, ಧಾರವಾಡ ಜಿಲ್ಲೆಯ ಕಾಮಧೇನು, ಹಾಸನ ಜಿಲ್ಲೆಯ ಅಣತಿ, ತುಮಕೂರು ಜಿಲ್ಲೆಯ ಚಿಕ್ಕನಾಯ್ಕನಹಳ್ಳಿ, ತುರುವೇಕೆರೆ, ಹಂದನಕೆರೆ, ಬಳ್ಳಾರಿ ಜಿಲ್ಲೆಯ ಗಾದಿಗನೂರು ಹೀಗೆ ಕರ್ನಾಟಕದಾದ್ಯಂತ ರೇವಣಸಿದ್ಧನ ಹೆಸರಿನಲ್ಲಿ ನೂರಾರು ಕುರುಬರ ಮಠಗಳಿವೆ. ಲಿಖಿತ ಮತ್ತು ಮೌಖಿಕ ಸಾಮಗ್ರಿಗಳು ರೇವಣಸಿದ್ಧ ಕುರುಬ ಸಮುದಾಯಕ್ಕೆ ಸೇರಿದವನೆಂಬುದನ್ನುಸ್ಪಷ್ಟಪಡಿಸುತ್ತವೆ.

ಇನ್ನು ಸಿದ್ಧರಾಮನು ಮೂಲತಃ ಕುರುಬ ಸಮುದಾಯಕ್ಕೆ ಸೇರಿದವನೆಂದು ಹೇಳಲಿಕ್ಕೆ ಲಿಖಿತ ಮತ್ತು ಮೌಖಿಕ ಆಕರಗಳಲ್ಲಿ ಸಾಕಷ್ಟು ಪುರಾವೆಗಳಿವೆ. ಸಿದ್ಧಮಂಕ ಚರಿತೆ ಮತ್ತು ಮರುಳಸಿದ್ಧೇಶ್ವರ ಚರಿತೆ ಎಂಬ ದೇಶೀ ಕಾವ್ಯಗಳು ಸಿದ್ಧರಾಮ ಸಂಪ್ರದಾಯದ ಸಿದ್ಧಮಂಕನ ಚರಿತ್ರೆಯನ್ನು ನಿರೂಪಿಸುತ್ತವೆ. ಸಿದ್ಧಮಂಕನಿಗೆ ಪರ್ಯಾಯವಾಗಿ ಮರುಳಸಿದ್ಧ ಎಂದೂ ಕರೆಯಲಾಗಿದೆ. ಈ ಸಿದ್ಧಮಂಕನ ಸಂಪ್ರದಾಯದ ಒಡೆಯರನ್ನು ಮಂಕೊಡೆಯರು ಎಂದು ಕರೆಯುತ್ತಾರೆ. ಬಿಜಾಪುರ ಜಿಲ್ಲೆಯ ಸರೂರು ಚಿಕ್ಕನಾಯ್ಕನಹಳ್ಳಿ, ತರೀಕೆರೆ ತಾಲೂಕಿನ ಸೊಲ್ಲಾಪುರ, ಹಾಸನ ಜಿಲ್ಲೆಯ ಬಾಣಾವರ ಮೊದಲಾದಡೆ ಸಿದ್ಧರಾಮನ ಹೆಸರಿನ ಕುರುಬರ ಮಠ ಮಂದಿರಗಳಿವೆ. ಮಂಕೊಡೆಯರು ಈ ಮಠಗಳ ಪೀಠಾಧಿಪತಿಗಳು. ಸಿದ್ಧರಾಮನಿಗೂ ಕಂಥೆಸೇವೆ ಅರ್ಪಿಸುವ ಪದ್ದತಿ ಕುರುಬರಲ್ಲಿದೆ.

ಮಹಾರಾಷ್ಟ್ರದ ಸೊಲ್ಲಾಪುರದ ಸಿದ್ಧರಾಮೇಶ್ವರನು ಧನಗರ (ಕುರುಬರು) ಸಮುದಾಯದ ಆರಾಧ್ಯ ದೈವವಾಗಿದ್ದಾನೆ. ಅಲ್ಲಿನ ಪೂಜಾರಿಗಳು ಮೂಲತಃ ಕುರುಬರಾಗಿದ್ದು, ಈಗ ಅವರಿಗೆ ಹಬ್ಹು ಎಂದು ಕರೆಯಲಾಗುತ್ತದೆ. ಇದಕ್ಕೆ ಪೂರಕವಾಗಿ ಮಹಾರಾಷ್ಟ್ರದ ಖ್ಯಾತ ಸಂಶೋಧಕರಾದ ಚಿಂತಾಮಣಿ ಢೇರೆಯವರ ಅಭಿಪ್ರಾಯ ಹೀಗಿದೆ :   ‘ಸಿದ್ಧರಾಮೇಶ್ವರನು ದಕ್ಷಿಣದಲ್ಲಿ ಪಶುಪಾಲಕ (ಕುರುಬ) ಜನಾಂಗದ ಪರಂಪೆಯಲ್ಲಿನ ಒಬ್ಬ ಮಹಾನ್ ಸಿದ್ಧಪುರುಷ ಎಂಬುದು ಸ್ಪಷ್ಟವಾಗುತ್ತದೆ.  ಸಿದ್ಧರಾಮನ ಜನನದ ಭವಿಷ್ಯವನ್ನು ಹೇಳಿದ ರೇವಣಸಿದ್ಧನು ಕೂಡ ಕುರುಬ ಜನಾಂಗದಲ್ಲಿಯ ಸಿದ್ಧಪುರುಷನೇ ಆಗಿದ್ದಾನೆ.

ಅದೂ ಅಲ್ಲದೆ ಸಿದ್ಧರಾಮೇಶ್ವರನು ಹುಟ್ಟಿದಾಗ ಆತನ ತಂದೆ ತಾಯಿಗಳು ಅವನಿಗೆ ಇಟ್ಟಿರುವ ಹೆಸರು ಅವರ ಕುಲದೇವರಾದ ಧೂಳಿಮಹಾಂಕಾಳನದು. ಈ ಧೂಳಿಮಹಾಂಕಾಳನು ಪಶುಪಾಲಕ (ಕುರುಬ ) ಸಮಾಜದ ದೈವವಾಗಿದ್ದಾನೆ. ಈ ದೈವದ ಬಗ್ಗೆ ಪಶುಪಾಲಕ ಸಮಾಜದಲ್ಲಿ ಇಂದಿಗೂ ಅಪಾರ ಭಕ್ತಿಭಾವವಿದೆ. ಹಾಗೆಯೇ ಮಕ್ಕಳ ಸಂರಕ್ಷಣೆ ಮತ್ತು ಸಂವರ್ಧನೆಯ ವಿಚಾರದಲ್ಲಿಯೂ ಈ ಸಮಾಜದ ಜನ ಧೂಳಿಮಹಾಂಕಾಳನಲ್ಲಿ ಎಂಥ ಮೇಲ್ಮಟ್ಟದ ಶ್ರದ್ಧೆಯನ್ನು ಹೊಂದಿದ್ದಾರೆ ಎಂಬುದು ಅವಶ್ಯವಾಗಿ ಗಮನಿಸಬೇಕಾದ ಸಂಗತಿಯಾಗಿದೆ? (ಮಲ್ಲಿಕಾರ್ಜುನ ಮತ್ತು ಮಹಾರಾಷ್ಟ್ರ, ಪುಟ.100). ಹೀಗೆ ರೇವಣಸಿದ್ಧ ಮತ್ತು ಸಿದ್ಧರಾಮರು ಕುರುಬ ಮೂಲದವರು ಎನ್ನಲಿಕ್ಕೆ ಲಿಖಿತ ಮತ್ತು ಮೌಖಿಕ ರೂಪದಲ್ಲಿರುವ ಆಕರಗಳು ಪುಷ್ಟಿಯನ್ನು ನೀಡುತ್ತವೆ. ಹೀಗಾಗಿ ಕೆ.ಆರ್.ಬಸವರಾಜು ಅವರು  ‘ಸಿದ್ಧರಾಮನ ಪೂರ್ವಾಶ್ರಮದ ಜಾತಿ ಬಗ್ಗೆ ಹೇಳಿರುವ ಹೇಳಿಕೆಯು ತರ್ಕಬದ್ಧ, ಆಧಾರಸಹಿತ, ಸಮರ್ಥನೀಯ ಸಂಶೋಧನೆಯಾಗಿಲ್ಲ’ ಎಂದು ಹೇಳುವುದು ಸರಿಯಾದುದಲ್ಲ

News article from Prajavani -

No comments:

Post a Comment